My village name is Samathala

ನಾ ಹುಟ್ಟುದ ಊರಿನ ಹೆಸರು ಸಮತಳ, ಸೌತ್ಲ ಅಲ್ಲ.ಸರಸ್ವತಿಪುರವೆಂಬ ಹೆಸರು ಇದ್ದದ್ದು ತಿಳಿದು ಬರುತ್ತದೆ. ಸಮತಳ ನಾನು ಹುಟ್ಟಿದ ಊರು. ಇದು ಭಾರತ ದೇಶದ ಕರ್ನಾಟಕ ರಾಜ್ಯದ ಮಲೆನಾಡಿನ ಕಾಫಿ ಜಿಲ್ಲೆ ಎಂದು ಪ್ರಸಿದ್ಧವಾದ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ  ಐತಿಹಾಸಿಕ ಅಮೃತೇಶ್ವರ ದೇವಾಲಯವಿರುವ  ಅಮೃತಾಪುರ ಹೋಬಳಿಯಲ್ಲಿದೆ. ಇದು ಒಂದು ಪುಟ್ಟ ಗ್ರಾಮ.
 
ಈ ಗ್ರಾಮದಲ್ಲಿ ವೀರಶೈವರು, ಬಳೆಗಾರ ಶೆಟ್ಟರು, ಲಿಂಗಾಯತರು, ಮುಸಲ್ಮಾನರು ಇದ್ದಾರೆ. 1990 ರ ಚಂಡಮಾರುತದಿಂದ ಅತಂತ್ರಕ್ಕೊಳಗಾದ ತಮಿಳರು ಈ ಗ್ರಾಮದಲ್ಲಿ ನೆಲೆನಿಂತು ಕನ್ನಡ ಕಲಿತು ಗ್ರಾಮಸ್ಥರಾಗಿದ್ದಾರೆ ಮತ್ತು ತಮ್ಮ ನೆಲೆ ಕಂಡುಕೊಂಡಿದ್ದಾರೆ.
 
ಗ್ರಾಮದಲ್ಲಿ ಶ್ರೀ ಬಸವೇಶ್ವರ ದೇವಸ್ಥಾನ, ಶ್ರೀ ತಿಮ್ಮಪ್ಪನ ದೇವಸ್ಥಾನ, ಶ್ರೀ ಪತ್ರೆ ಮರದ ಸಿದ್ದೇಶ್ವರ ಗುಡಿಯಿದೆ. ಆಲದಮರದಮ್ಮ, ಬೇವಿನ ಮರದಮ್ಮ, ಸಂತೆ ದಿಬ್ಬದ ಅಮ್ಮ ನೆಲೆಸಿದ್ದಾರೆ.
 
ಪ್ರತಿ ವರ್ಷ ಇಲ್ಲಿ ಜಾತ್ರೆ ನಡೆಯುತ್ತದೆ, ಇಲ್ಲಿ ನಡೆಯುವ ಜಾತ್ರೆಯು ವಿಶೇಷವಾಗಿದೆ. ಜಾತ್ರೆಗೆ ಮೊದಲು ದೇವರ ವಿಗ್ರಹಗಳನ್ನು ಕಲ್ಲತ್ತಿಗಿರಿಗೆ ತೆಗೆದುಕೊಂಡು ಹೋಗಲಾಗುತ್ತದೆ. ಅಲ್ಲಿ ನೀರಿನಲ್ಲಿ ವಿಗ್ರಹಗಳನ್ನು ತೊಳೆಯಲಾಗುತ್ತದೆ. ನಂತರ ಆಯ್ದ ಕೆಲವರು ಮಾತ್ರ ವಿಗ್ರಹಗಳೊಂದಿಗೆ ಮೇಗಲ ಗಿರಿಗೆ ತೆರಳುತ್ತಾರೆ. ಮೇಗಲ ಗಿರಿಯ ದಾರಿಯು ದುರ್ಗಮವಾದುದಾಗಿದೆ. ಮೇಗಲಗಿರಿಯಲ್ಲಿ ನೆಲೆಸಿರುವ ಶ್ರೀ ವೀರಭದ್ರೇಶ್ವರ ದೇವರಿಗೆ ಪೂಜೆ ಮಾಡಲಾಗುತ್ತದೆ, ವಿಗ್ರಹಗಳನ್ನು ಮತ್ತೊಮ್ಮೆ ತೊಳೆಯಲಾಗುತ್ತದೆ. ವಿಗ್ರಹಗಳಿಗೆ ಪೂಜೆ ಸಲ್ಲಿಸಿ ಅಲ್ಲಿ ದೊರೆಯುವ ನೀರು ಮತ್ತು ದರ್ಭೆಯೊಂದಿಗೆ ಮತ್ತೆ ಕೆಳಗೆ ಬರುತ್ತಾರೆ.
 
ಮೇಗಲಗಿರಿಗೆ ತೆರಳಿದವರು ವಾಪಸ್ಸು ಬರುವುದರೊಳಗಾಗಿ ಅಡುಗೆ ಮಾಡಲಾಗುತ್ತದೆ. ಪ್ರಸಾದವನ್ನು ಸ್ವಾಮಿಗೆ ಅರ್ಪಿಸಲು ಎಲ್ಲಾ ತಯಾರಿ ನಡೆದಿರುತ್ತದೆ. ಮೇಗಲಗಿರಿಯಿಂದ ಬಂದ ನಂತರ ಕೆಳಗಡೆ ಶ್ರೀ ವೀರಭದ್ರ ಸ್ವಾಮಿಯ ದೇವಾಲಯದಲ್ಲಿ ಪೂಜೆ ನಡೆಯುತ್ತದೆ. ಪೂಜೆಯ ನಂತರದಲ್ಲಿ ನೂರೊಂದೆಡೆ ನಡೆಯುತ್ತದೆ. ಈ ಕಾರ್ಯಕ್ರಮವನ್ನು ನಡೆಸಿಕೊಡಲು ಪ್ರತ್ಯೇಕ ವ್ಯಕ್ತಿಯನ್ನು ಕರೆತರಲಾಗುತ್ತದೆ.
 
ನೂರೊಂದೆಡೆಯ ನಂತರ ಅಮ್ಮನವರ ಆಲಯಕ್ಕೆ ತೆರಳಿ ಪೂಜೆ ಸಲ್ಲಿಸಿ ಗ್ರಾಮಕ್ಕೆ ವಾಪಸ್ಸು ಬರಲಾಗುತ್ತದೆ. ಗ್ರಾಮದ ಸರಹದ್ದಿನಲ್ಲಿ ಮತ್ತೆ ಅಡುಗೆ ಮಾಡಿ ಕಾಲ್ನಡಿಗೆಯಲ್ಲಿ ಗ್ರಾಮಕ್ಕೆ ದೇವರುಗಳನ್ನು ತರಲಾಗುತ್ತದೆ.
 
ಮರುದಿನ ಶ್ರೀ ರಂಗನಾಥ ಸ್ವಾಮಿ ರಥೋತ್ಸವ ವಿರುತ್ತದೆ. ರಥೋತ್ಸವದ ದಿನ ಹಾಗೂ ಮರುದಿನ ಶ್ರೀ ಸಿದ್ದೇಶ್ವರ ಸ್ವಾಮಿ ಆಲಯದಲ್ಲಿ ಊಟದ ವ್ಯವಸ್ಥೆಯಿರುತ್ತದೆ. ಇಲ್ಲಿ ಗಂಡಸರೇ ಅಡುಗೆ ಮಾಡುವುದು ವಿಶೇಷ. ನಂತರದಲ್ಲಿ ಎರಡನೇ ದಿನ ಶ್ರೀ ಸಿದ್ದೇಶ್ವರ ಸ್ವಾಮಿಯ ಗದ್ದುಗೆಗೆ ರುದ್ರಾಭಿಷೇಕ ನಡೆಯುವುದು. ತಿಮ್ಮಪ್ಪ ಸ್ವಾಮಿಗೆ ಪ್ರಮುಖ ಬೀದಿಗಳಲ್ಲಿ ಓಕಳಿ ನಡೆಯುವುದು ನಂತರದಲ್ಲಿ ಮತ್ತೊಮ್ಮೆ ಸ್ನಾನ ಮಾಡಿಸಿ ಶ್ರೀ ಸಿದ್ದೇಶ್ವರ ಸ್ವಾಮಿಯ ಆಲಯಕ್ಕೆತರಲಾಗುವುದು. ನಂತರದಲ್ಲಿ ದೇವಸ್ಥಾನದ ಧ್ವಜವನ್ನು ಹರಾಜು ಹಾಕಲಾಗುವುದು.
 
ಸಮತಳ ಗ್ರಾಮದಲ್ಲಿ ಅಡಿಕೆ, ತೆಂಗು, ಮಾವು, ಬಾಳೆ  ಮುಖ್ಯ ವಾಣಿಜ್ಯ ಬೆಳೆಗಳಾಗಿವೆ. ಸಂತೆದಿಬ್ಬದ ಕಾವಲನ್ನು ನೇರಲಕೆರೆ ಗ್ರಾಮದವರು ಆಕ್ರಮಿಸಿಕೊಳ್ಳುವವರೆಗು ಪಶುಸೋಗೋಪನೆಯು ವ್ಯಾಪಕವಾಗಿದ್ದಿತು. ಭತ್ತ, ರಾಗಿ, ಜೋಳ, ಉರುಳಿ ಯನ್ನು ಬೆಳೆಯುತ್ತಾರೆ.
 
ಗ್ರಾಮದಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಿರುತ್ತದೆ. ಹೆಚ್ಚಿನ ವಿದ್ಯಾಭ್ಯಾಸಕ್ಕೆ ನೆರೆಯ  ಕುಂಟಿನಮಡು, ನೇರಲಕೆರೆ ಗ್ರಾಮಗಳಿಗೆ ಹಾಗೂ ತರೀಕೆರೆ,ಭದ್ರಾವತಿ, ಶಿವಮೊಗ್ಗ, ಬೆಂಗಳೂರುಗಳಿಗೆ ತೆರಳುತ್ತಾರೆ.
 
ಗ್ರಾಮಕ್ಕೆ ಶ್ರೀ ರಾಮೇಶ್ವರ ಮೋಟಾರ್ಸ, ಶ್ರೀ ಸಿದ್ದರಾಮೇಶ್ವರ ಮೋಟಾರ್ಸ,ಶ್ರೀ ಆಂಜನೇಯ ಮೋಟರ್ಸ, ಏ.ಜಿ.ಎಂ.ಎಸ್, ಸಾರಿಗೆ ಸೌಕರ್ಯವನ್ನು ನೀಡುತ್ತಿವೆ.

Comments

Popular posts from this blog

ವೀರಶೈವ ಪಂಚ ಪೀಠಗಳು

ಶ್ರೀ ಮ.ನಿ.ಪ್ರ ವಿರೂಪಾಕ್ಷ ಮಹಾಸ್ವಾಮಿಗಳು,ಶ್ರೀ ಗುರು ಮೂಕಪ್ಪ ಶಿವಯೋಗಿಗಳ ಮಠ, ಜಂಗಮ ಕ್ಷೇತ್ರ, ತಿಪ್ಪಾಯಿಕೊಪ್ಪ ಕಿರು ಪರಿಚಯ

Sri Jagadguru 1008 Ujjaini Shrigalu @ Abbe tumkur fair - veerashaiva